ಆಟಿ ತಿಂಗಳ ಹೊಡಾಡಿಕೆ

ಒಪ್ಪಣ್ಣ ಶುದ್ದಿ ಹೇಳ್ತ° ಹೇಳುದೇ ದೊಡ್ಡ ಮಾವನ ಮನೆಲಿ ಒಂದು ಶುದ್ದಿ.
ಶುದ್ದಿ ಹೇಳುದು ಹೇಳಿರೆ ಎಂತರ? ಆರ ಶುದ್ದಿ? ಎಂತಕೆ? ಯೇವತ್ತು? ಹೀಂಗೆಲ್ಲ ಪ್ರಶ್ನೆ. ಎಡಿಗಾದಷ್ಟಕ್ಕೆ ಉತ್ತರ ಕೊಟ್ಟೆ. ಒಳುದ್ದಕ್ಕೆ ಸುಮ್ಮನೆ ಕೂದೆ. ;-(

ಶುದ್ದಿ ಆರದ್ದಪ್ಪಾ? ನಮ್ಮವರದ್ದೇ! ನಮ್ಮದೇ ಆಚೀಚ ಮನೆಯವರದ್ದು.
ಎಂಗಳ ಊರಿಲಿ ಕೆಲವು ಜೆನ ಇದ್ದೆಯೊ° - ಅಂದಿಂದಲೇ ಚೆಂಙಾಯಿಗೊ. ಈಗಳೂ ಹಾಂಗೆ. ಪುರುಸೊತ್ತಿದ್ದರೆ ಸಿಕ್ಕಿ ಒಂದು ರಜ್ಜ ಹೊತ್ತು ಮಾತಾಡ್ತ ಕ್ರಮ. ಎಲ್ಲಿ ಆದರೂ ಆತು, ಆಚಕರೆ ತೋಟಲ್ಲಿಯೋ,ಈಚಕರೆ ಪಂಪಿನ ಕೊಟ್ಟಗೆಲಿಯೋ, ಒಪ್ಪಣ್ಣನ ಹಟ್ಟಿ ಕರೆಲಿಯೋ, ಅಜ್ಜಕಾನ ಬಾವನ ಜೆಗಿಲಿಲಿಯೋ, ಸಿದ್ದನಕೆರೆ ಅಪ್ಪಚ್ಚಿಯ ಕಂಪ್ಯೂಟರು ಶಾಲೆಲಿಯೋ, ಪಾಲಾರು ಅಣ್ಣನ ಅಡಕ್ಕೆ ಅಟ್ಟೊಳಿಗೆ ಕರೆಲಿಯೋ, ಗುಣಾಜೆ ಕುಂಞಿಮಾಣಿಯ ಕಾರು ಶೆಡ್ಡಿಲಿಯೋ, - ಹೀಂಗೇ ಎಲ್ಯಾರು.
ಗೊಂತಿಪ್ಪ ಶುದ್ದಿ ಸುರುವಿಂಗೆ, ರಜ್ಜ ದೂರದ ಶುದ್ದಿ ಎಲ್ಲ ಮುಂದಂಗೆ ಹೇಳುವ ಕ್ರಮ. ಎಲ್ಲೊರು ಹಾಂಗೆ, ಅಲ್ದೋ?

ಇದರ ಎಡಕ್ಕಿಲಿ ’ನೀನು ನಮ್ಮ ಊರಿನ, ನಮ್ಮ ಬೈಲಿನ ಶುದ್ದಿ ಮಾಂತ್ರ ಹೇಳುದು ಎಂತಕೆ ಒಪ್ಪಣ್ಣ?’ ಹೇಳಿ ದೊಡ್ಡಮಾವ° ಜೋರು ಮಾಡಿದವಲ್ದ, ಎನಗೆ. ;-(
ಹೆರಿಯವು ಹೇಳೆಕ್ಕು, ನಾವು ಕೇಳೆಕ್ಕು.
ಸರೀ ಗೊಂತಿಪ್ಪ ನಮ್ಮದೇ ಊರಿನ ಶುದ್ದಿ ಆದರೆ ಕಣ್ಣಿಂಗೆ ಕಟ್ಟಿದ ಹಾಂಗೆ ಹೇಳುಲಕ್ಕು, ಗೊಂತಿಲ್ಲದ್ದ ವಿಶಯ ಆದರೆ? ’ಅಡ, ಅಡ’ ಹೇಳಿ ಸೇರುಸುತ್ತ ಡ-ಶುದ್ದಿ ಹೇಳೆಕ್ಕಷ್ಟೆ.
ಒಪ್ಪಣ್ಣಂದುದೇ ಅದೇ ಕ್ರಮ - ನಮ್ಮ ಊರಿನ, ನಮ್ಮದೇ ಪರಿಸರದ ಶುದ್ದಿ ಸುರೂವಿಂಗೆ ಹೇಳುಸ್ಸು. ಅದರ ಒಟ್ಟಿಂಗೆ ಚೆಂಙಾಯಿಗಳ, ಗುರ್ತದವರ, ನೆಂಟ್ರ, ಕಚ್ಚೋಡದವರ, ಬೆಂಗ್ಳೂರಿನವರ ಎಲ್ಲ ಶುದ್ದಿ ಹೇಳೆಕ್ಕೂಳಿ ಶುರು ಮಾಡುದು. ಈಗಾಗಲೇ ಹೇಳಿದ್ದು ಇದ್ದು. ಚೆಂಬರ್ಪು ಅಣ್ಣನೋ, ಪಂಜ ಚಿಕ್ಕಯ್ಯನೋ, ಪುತ್ತೂರತ್ತಿಗೆಯೋ, ಬೇಂಕಿನ ಪ್ರಸಾದಮಾವನೋ - ಕೇಳ್ತವು ಇದ್ದರೆ ಇನ್ನೂ ಹೇಳ್ತೆ. ;-)

ಅದಿರಳಿ.
ಈ ವಾರದ ವಿಶಯ ಎಂತರ ಹೇಳಿರೆ:

ಇದು ಆಟಿ ತಿಂಗಳು, ಜೋರು ಮಳೆ.
ಮಳೆ ಇಲ್ಲೆ ಇಲ್ಲೆ ಹೇಳಿ ಎಲ್ಲ ಬೈಕ್ಕೊಂಡವು, ಈಗ ತೆಕ್ಕೊಳಿ - ಧಾರಾಳ. ’ಎಂತರಲ್ಲಿ ತುಂಬುಸಿ ಮಡುಗುಸ್ಸು ಬೇಕೆ?’ ಹೇಳಿ ಹೊಸಮನೆ ಅಜ್ಜ ನೆಗೆಮಾಡುಗು. ಅವು ನೆಗೆ ಮಾಡಿರೂ ಗೊಂತಪ್ಪಲೆಂತ ಹಲ್ಲಿಲ್ಲೆ! ಎಂಗೊಗೆ ಗೊಂತಕ್ಕಷ್ಟೆ. ಎಂತರಲ್ಲೂ ತುಂಬ, ಎಲ್ಲವುದೇ ಹೋಗಿ ಹೋಗಿ ಕುಂಬ್ಳೆಅಜ್ಜಿ ಮನೆ ಕರೆಲೆ ಆಗಿ ಕಡಲಿಂಗೆ ಹೋಗಿ ಸೇರಿಯೇ ಸೇರಿತ್ತು.

’ಆಟಿಟರ್ದ ಅರೆಗ್ಗಾಲ, ಮಾಯಿಟರ್ದೊ ಮರಿಯಾಲೊ’ ಹೇಳಿ ಬಟ್ಯ ನಾಯ್ಕ° ಹೇಳುಗು, ತುಳು ಗಾದೆ(ಆಟಿಲಿ ಅರ್ದ ಬೇಸಗೆ, ಮಾಯಿಲಿ ಅರ್ದ ಮಳೆಗಾಲ). ಆದರೂ, ಮದಲಿಂಗೆ ಆಟಿ ಹೇಳಿತ್ತುಕಂಡ್ರೆ ನೆಡು ಮಳೆಗಾಲ, ಒರಿಶ ಇಡೀ ತೋಟಲ್ಲಿ ಇಪ್ಪ ಕೃಷಿ ಬಟ್ಟಕ್ಕೊಗೆ ರಜ್ಜ ಪುರುಸೊತ್ತು. ಜೆಂಬ್ರ ಎಂತದನ್ನೂ ಮಾಡ್ಳೆ ಅವಕಾಶ ಕಷ್ಟ ಸಾಧ್ಯ. ಹಾಂಗಾಗಿ 'ಆಟಿಲಿ ಬೇಡ’ ಹೇಳಿ ಒಂದು ರೂಢಿ ಬಂತು. ಹೇಂಗೂ ಆಟಿಲಿ ವಿಶೇಷ ಕಾರ್ಯ ಎಂತ ಮಾಡದ್ದ ಕಾರಣ ಈ ಸರ್ತಿ ಒಪ್ಪಣ್ಣಂದುದೇ ವಿಶೇಷ ಶುದ್ದಿ ಇಲ್ಲೆ ಹೇಳುದೇ ಒಂದು ಶುದ್ದಿ. ;-(

ಆಟಿ ತಿಂಗಳಿಲಿ ಇತರ ’ದೈವೀ ಕಾರ್ಯಕ್ರಮ ಮಾಡ್ತ ಮರಿಯಾದಿ ಇಲ್ಲೆ’ ಹೇಳ್ತ ಲೆಕ್ಕಲ್ಲಿ ಹನ್ನೆರಡು ದಿನದ ಕಾಲ ನಿರಂತರ ದುರ್ಗಾನಮಸ್ಕಾರ (ಕಿಸ್ಕಾರ ಪೂಜೆ / ದುರ್ಗಾ ಪೂಜೆ) ಮಾಡ್ತ ಕ್ರಮ ಇದ್ದು. ಹಳೆ ಮನೆಗಳಲ್ಲಿ ಆವುತ್ತು ಈಗಳುದೇ. ’ಹೊಡಾಡಿಕೆ’ ಹೇಳಿ ಹೆಸರು. ಈ ಶುದ್ದಿ ಓದುತ್ತ ಮಕ್ಕೊಗೆ ಗೊಂತಿಕ್ಕಲ್ದ? ಅಜ್ಜಂದ್ರಿಂಗೆ ಹೇಂಗೂ ಬೇರೆ ಎಲ್ಲಿಯೂ ಹೋಪಲೆಡ್ಕೊಂಡಿತ್ತಿಲ್ಲೆ, ಅದಕ್ಕೆ ಮನೆಲೇ ಕೂದೊಂಡು ಪೂಜೆ ಮಾಡುವ° ಹೇಳಿ ಸುರು ಮಾಡಿದ್ದೋ ಏನೋ! ತುಂಬ ಒಳ್ಳೆ ಕ್ರಮ ಮಾಂತ್ರ.ಮಾಮೂಲು ದುರ್ಗಾಪೂಜೆಯ ಹಾಂಗೆ- ಕಿಸ್ಕಾರಲ್ಲಿ - ಆಟಿ ತಿಂಗಳು ಕಿಸ್ಕಾರ ಹೇಂಗೂ ದಾರಾಳ - ಕಿಸ್ಕಾರಲ್ಲಿ ಪುಷ್ಪಾಂಜಲಿ ಕೊಡುದು, ಒಂದು ನೇವೇದ್ಯ ಮಾಡುದು, ಒಂದು ಮಂಗಳಾರತಿ. ಮನೆಲಿ ಸಂಸ್ಕೃತಿ ನಳನಳಿಸುಲೆ ಒಳ್ಳೆ ಅವಕಾಶ. ಹನ್ನೆರಡು ದಿನ ನಿರಂತರ ಪೂಜೆ ಮಂತ್ರ ಕೇಳಿ ಎಂತವಂಗುದೇ ಬಾಯಿಪಾಟ ಬಕ್ಕು. ಮನೆಲಿ ಅಮ್ಮಂಗೆ ಜಾತವೇದಸೇ ಎಲ್ಲ ಬಕ್ಕು. ಒಪ್ಪಣ್ಣ "ಗಣಾನಾಂತ್ವಾ..." ಹೇಳುವಗ ತಪ್ಪಿರೆ ಎಲ್ಲ ಒಪ್ಪಕ್ಕಂಗೆ ಗೊಂತಕ್ಕು. ;-) ಮುಖ್ಯವಾಗಿ ಈ ಹೊಡಾಡಿಕೆಂದಾಗಿಯೇ. ಪೂಜೆ ಮಂಗಳಾರತಿ ಅಪ್ಪಗ ದಂಡನಾಯಕ ಟಾಮಿಗೆ ಗೊಂತಕ್ಕು, ಶಂಕ ಉರುಗೆಕ್ಕು ಹೇಳಿಗೊಂಡು, ಒಳ ಒಪ್ಪಕ್ಕ ಶಂಕ ಕರೆಲಿ ಮಡಗಿರೂ ಅದು ನಿಲ್ಲುಸ. ಪೂಜೆ ಮುಗುದ ಕೂಡ್ಳೆ ಮೋಳಮ್ಮನೂ ಎದ್ದು ನಿಂದು ತಯಾರು ಅಕ್ಕು, ನೈವೇದ್ಯದ ಅಶನ, ಬೆಲ್ಲ ತುಂಡು ತಿಂಬಲೆ. ಎಷ್ಟೋ ಒರಿಶದ ಅಬ್ಯಾಸ ಅವಕ್ಕೆ. :-). ಈಗ ಹೆಚ್ಚಿನ ಮನೆಗಳಲ್ಲಿ ಮಾಡ್ತವಿಲ್ಲೆ. ಬೇಜಾರದ ವಿಶಯ ಅದು.

ಎಂಗಳ ಆಚಕರೆ ತರವಾಡು ಮನೆಲಿ ಈ ಹೊಡಾಡಿಕೆ ಆವುತ್ತು. ಸ್ವತಃ ರಂಗಮಾವನೇ ಮಾಡುದು. ಆಟಿ ತಿಂಗಳಿನ ಒಂದು ಸೋಮವಾರ ಸುರು ಆಗಿ ಮತ್ತಾಣ ಶುಕ್ರವಾರ ಮುಗಿತ್ತ ಹಾಂಗೆ, ಹನ್ನೆರಡು ದಿನ. ಅಕೇರಿಯಾಣ ದಿನ ಕಿಳಿಂಗಾರು ಬಟ್ಟಮಾವ° ಬಂದು ಗೌಜಿಲಿ ಉತ್ಥಾನ ಮಾಡ್ತವು. ಈ ಒರಿಶದ ಆ ದಿನ ಇಂದು. ಮಳೆ ಬಿಟ್ಟಿದು. ಹೋಯೆಕ್ಕು.

ಮೊನ್ನೇಣ ಜೋರು ಮಳೆ- ಸೋಮವಾರ ಸುರು ಆದ್ದು ಒಂದು ದಿನ ಬಿಡದ್ದೆ ಬಯಿಂದು. ಪೂರ ನೀರೇ ನೀರು. ಎರಡು ದಿನ ಎಲ್ಲಿಗೂ ಹೋಯಿದಿಲ್ಲೆ. ಮತ್ತೆ ಒಂದರಿ ಹೋಗಿ ಒಂದು ಸುತ್ತು ಹೊಡಕ್ಕೊಂಡು ಬಂದೆ, ಎಂತೆಲ್ಲ ಆತು ಹೇಳಿ ನೋಡ್ಳೆ. ಹೇಂಗೂ ಆಟಿಲಿ ಬೇರೆಂತ ವಿಶೇಷ ಶುದ್ದಿ ಇಲ್ಲೆಡ ಅಲ್ದ, ಎಂತಾರು ನಿತ್ಯದ ಶುದ್ದಿ ಸಿಕ್ಕುತ್ತೋ ನೋಡಿ ಬಂದೆ.
ಆ ದಿನ ಸಿಕ್ಕಿದ ಕೆಲವು ಒಪ್ಪೊಪ್ಪ ಶುದ್ದಿಗೊ ಇಲ್ಲಿದ್ದು. (ಬಿಟ್ಟು ಹೋದ್ದದು ಇದ್ದರೆ ಸೇರುಸಿಬಿಡಿ):

  • ಸಾರಡಿ ತೋಡು ಎರಡು ಸರ್ತಿ ಮೊಗಚ್ಚಿತ್ತು, ಪಾಡಿ ಗೆದ್ದೆ ಪೂರ ಒಂದೇ ಆತು, ಗಡಿಯೇ ಇಲ್ಲೆ. ಎಷ್ಟು ಚೆಂದ!
  • ಕಂಜಿ ಕೈಕ್ಕಾಂಜಿ ಎಮ್ಮೆ ಕಂಜಿ ಎಲ್ಲ ಬೆಳ್ಳಕ್ಕೆ ಹೋಗಿ ಕಲಂಕು ನೀರು ಕುಡುದು ಮೇಲೆ ಎದ್ದು ಬಂತು. ’ಎಮ್ಮೆ ಕಂಜಿಗೆ ಮೀಸಲೆ ಹೇಳಿಕೊಡೆಕ್ಕೋ?’ ಹೇಳಿ ಹರಿಮಾವನ ಗಾದೆ ಒಂದಿದ್ದು, ;-) ಮಾತಿನ ಎಡೆಡೆಲಿ ಅವು ಗಾದೆ ಸೇರುಸುದು, ಬೇಸಗೆ ಮಳೆಗಾಲ ಹೇಳಿ ಲೆಕ್ಕ ಇಲ್ಲೆ- ಕುಶೀ ಅಪ್ಪದು ಅವರತ್ರೆ ಮಾತಾಡ್ಳೆ.
  • ಬೆಂಗ್ಳೂರಿಲಿ ಒಂದು ಗೌಡನ ಕಂಜಿಯೂ ಬೆಳ್ಳಕ್ಕೆ ಹೋಯಿದಡ, ಬೆಂಗ್ಳೂರಿಲಿಪ್ಪ ಪೆರ್ಲದಣ್ಣ ಹೇಳಿದವು.
  • ಕೋಟಿಯ ಆಟಿಕಳೆಂಜ ಆಚಕರೆಲಿ ಬಾಕಿ ಆಗಿ ಮತ್ತೆ ಮುಕಾರಿ ಗುಡ್ಡೆಲೆ ಆಗಿ ಸೀತಾಂಗೋಳಿಗೆ ಹೋದ್ದಡ!
  • ಜೋರು ಗಾಳಿಗೆ ಎರಡು ಅಡಕ್ಕೆ ಮರ ಮುರುದ್ದು ಪಾಲಾರು ಅಣ್ಣನಲ್ಲಿ ಮಾಂತ್ರ. ಗುಣಾಜೆ ತೋಟದ ಹೊಡೆಂದ ಬಂದ ಗಾಳಿ ಹೇಳಿ ಕುಂಞಿಮಾಣಿಯ ಮೇಲೆ ಪಿಸುರು ಈಗ! ;-)
  • ಗುಣಾಜೆ ಕುಂಞಿಮಾಣಿಯ ಕಾರುಶೆಡ್ಡಿನ ಮಾಡೊಟ್ಟೆ ಆಗಿ ವೇನಿಡೀ ಚೆಂಡಿ, ಎಡನ್ನೀರು ಶಾಲೆಲಿ ಮೀಟಿಂಗು ಇದ್ದು, ’ವೇನಿಲಿ ಹೋಯೆಕ್ಕ?’ ಕೇಳಿ ಅಪ್ಪಗ "ಬೇಡ" ಹೇಳಿದ ಅವನ ಅಪ್ಪನ ಹತ್ರೆ ಬೇಜಾರಾಯಿದಡ ಅವಂಗೆ.
  • ಈಚಕರೆ ಪುಟ್ಟನ ತೋಟಲ್ಲಿ ಬಪ್ಪ ಕರೆಂಟಿನ ಪೈಪಿಂಗೆ ಕೊಟ್ಟೆ ತೆಂಗಿನ ಮರ ಬಿದ್ದು ಎಂಗಳ ಬೈಲಿಂಗೆ ಆ ಎರಡು ದಿನ ಕರೆಂಟಿಲ್ಲೆ.
  • ಶೇಡಿಗುಮ್ಮೆ ಮಾವನ ನಾಯಿಗೂಡಿಂಗೆ ಕರೆಂಟು ಬಲ್ಬು ಹಾಕಿ ಗುಣ ಇಲ್ಲೆ ಹೇಳಿ ಆತು! ಆಲ್ಸೇಶನು ನಾಯಿಗೆ ಅದರ ಕುಂಞಿಯ ರೂಪತ್ತೆಯಲ್ಲಿಗೆ ಕೊಟ್ಟದು ಆ ಕಸ್ತಲೆಲಿ ಜೋರು ನೆಂಪಾಯ್ಕೊಂಡಿತ್ತೋ ಏನೋ!
  • ಸಿದ್ದನಕೆರೆ ಅಪ್ಪಚ್ಚಿಯ ಕಂಪ್ಯೂಟರಿಂಗೆ ಬೂಸರು ಹತ್ತಿದ್ದಡ. ಕರೆಂಟಿಲ್ಲದ್ರೆ ಬೂಸರಿಂಗೆ ಎಂತ ನಷ್ಟ, ಅಲ್ದೋ?
  • ಆಚಕರೆ ಮಾಣಿಯ ಕೆಮರದ ಬೆಟ್ರಿ ಕಾರಿತ್ತು, ಈಗ ಅಳಿಯನ ಪಟ ತೆಗವಲೇ ಎಡಿಯ. ಹೊಸ ಬೆಟ್ರಿ ತೆಗವಲೆ ಪೈಸಕ್ಕೆ ಹೇಳಿಗೊಂಡು ಒಂದರಿ ಬೇಂಕಿಂಗೆ ಹೋಗಿ ಬಂದ, ರೈನು ಕೋಟಿನ ಒಳ ಕೂದೊಂಡು.
  • ದೊಡ್ಡ(ಮಾಣಿ)ಬಾವನ ಲೇಪ್ಟೋಪು ಆಪಾಯಿದು, ಬೆಟ್ರಿ ಕಾಲಿ ಆಗಿ! ಶಾಲೆ ಜಾಲಿನ (ಕಹಿ)ಬೇವಿನ ಎಲೆ ತಿಂದ ಹಾಂಗೆ ಆಗಿತ್ತು ಅವಕ್ಕೆ. ;-)
  • ಎಡಪ್ಪಾಡಿ ಬಾವನ ಮೊಬೈಲಿಲಿ ಚಾರ್ಜು ಕಾಲಿ ಆಗಿತ್ತು. ಮಾತಾಡ್ಳೆ ಸುರು ಮಾಡುಗಳೇ "ಈಗ ಚಾರ್ಜು ಮುಗಿಗು!" ಹೇಳಿ ಸುರು ಮಾಡಿಗೊಂಡಿದ್ದದಡ. ;-)
  • ಸೀರಣಿ ಬಡುದ ಭರಕ್ಕೆ ಪೈಂಟು ಉದ್ದಿ ಮಡಗಿದ ಕಾಪಿ ಗೆಂಟುಗೊ ಚಿಗುರಿತ್ತೋ ಹೇಳಿ ದೊಡ್ಡ ಮಾವ ನೆಡಿರುಳು ಲಾಟ್ಣು ಹಿಡುದು ನೋಡಿದವಡ!
  • ಮಿಂಚಿನಡ್ಕ ಬಾವನ ಡಬ್ಬಲು ಚೋಲಿನ ಅಡಕ್ಕೆಗೆ ಡಬ್ಬಲು ತೊಟ್ಟೆ ಹಾಕಿರೂ ಪಸೆ ಎಳದ್ದು, ಕೆಮ್ಕಲ್ಲಿ ರೇಟು ಸಿಕ್ಕ ಹೇಳಿಗೊಂಡು ಸೇಟಿಂಗೆ ಕೊಡ್ತ ಆಲೋಚನೆ ಮಾಡಿಗೊಂಡಿದ್ದವು.
  • ಅಜ್ಜಕಾನ ಬಾವನ ಬೈಕ್ಕಿನ ಟೇಂಕಿಗೆ ನೀರು ಬಿದ್ದು - ಚೆ! ಪೆಟ್ರೋಲು ಚೆಲ್ಲೆಕ್ಕಷ್ಟೆ ಇನ್ನು. ಬೈಕ್ಕನ್ನೂ ಬೇಲಿಗೆ ಮಡುಗೆಕ್ಕಷ್ಟೆಯೋ ಏನೊ!
  • ಕುಂಬ್ಳೆ ಅಜ್ಜಿಯ ಚಿಕ್ಕಿನ ಗೆನಾ ಗೆಲ್ಲು ಒಂದು ಮುರುದ್ದು, ಅಜ್ಜಂಗೆ ಇನ್ನಾಣ ಒರಿಶ ಕೊಯಿವ ಕೆಲಸ ಕಮ್ಮಿ ಆತು.
  • ಪಂಜೆಯ ಚಿಕ್ಕಮ್ಮ ಕಮ್ಮಿ ಮಳೆ ಇಪ್ಪ ಮೈಸೂರಿಂಗೆ ಹೋಗಿ ಆಟಿಗೆ ಕೂದು ಬಂತು, ಇದು ಹೋದಪ್ಪಗ ಅಲ್ಲಿಯೂ ಮಳೆ ಅಡ - ಪುಣ್ಯವಂತೆ ಅಲ್ದೋ!
  • ನೀರ್ಚಾಲು ಶಾಲೆ ಜಾಲಿಲಿ ಮುರುದ ಕಹಿಬೇವಿನ ಗೆಲ್ಲು ಕೊಂಡೋಪಲೆ ಮಜಲುಕೆರೆಂದ ಬಂದಿತ್ತವು - ಬೇವಿನೆಣ್ಣೆ ಕಾಸಲೆಡ, ಶೇಡಿಗುಮ್ಮೆ ಬಾವ (S) ಹೇಳಿದ್ದು.
  • ಶೇಡಿಗುಮ್ಮೆ ಬಾವಂಗೆ ಅಜ್ಜಕಾನ ಬಾವ ಕಡ್ಳೆ ಕೊಡದ್ದಕ್ಕೆ ಕೂಗಿಯೋಂಡು ಹೋದ್ದಡ, ಮಳೆಗೆ ನೆನಕ್ಕೊಂಡೇ.
  • ಒಪ್ಪಕ್ಕನ ಹೊಸಾ ಚೂಡಿದಾರು ಒಣಗಲೆ ಹಾಕಿದ್ದು ತೆಗವಲೆ ಮರದು ಮಳಗೆ ನೆನದು ಬಣ್ಣ ಪೂರ ಜಾಲಿಂಗರುತ್ತು.
  • ಪುಟ್ಟಕ್ಕನ ಪುಸ್ತಕ ಪೂರ ಚೆಂಡಿ, ಓದದ್ದೆ ಮರುಳು ಜೋರಾಯಿದು ಕಾಣ್ತು ಅದಕ್ಕೆ. ;-)
  • ಬಂಡಾಡಿ ಅಜ್ಜಿಯ ರೇಡಿಯಕ್ಕೆ ಎಷ್ಟು ಜೋರು ಬಡುದರೂ ಕೇಳ್ತಿಲ್ಲೆ! ಬೆಟ್ರಿ ಮುಗುದ್ದೋ, ಅಲ್ಲ ಸ್ಪೀಕರಿಂಗೆ ಚಳಿ ಹಿಡುದ್ದೋ ಏನೋ! ;-(
  • ಯೇನಂಕೂಡ್ಳು ಅಣ್ಣಂಗೆ ಆ ಮಳಗೆ ಕೊಡೆ ಹಿಡ್ಕೊಂಡು ಮೊನ್ನೆ ಗ್ರಹಣದ ಪಟ ತೆಗವಲೆ ಬಾರೀ ಕಷ್ಟ ಆಯಿದಡ. ಅಕೆರಿಗೆ ಇಡೀ ಕಪ್ಪಿಪ್ಪ ಖ-ಗ್ರಾಸ ಪಟ ಸಿಕ್ಕಿತ್ತಡ, ಆರಿಂಗೂ ಸಿಕ್ಕದ್ದು!
  • ಪಾಡಿಗೆದ್ದೆಯ ಕಟ್ಟಪುಣಿ ಅಂದಾಜಿ ಆಗದ್ದೆ ಪಾರೆ ಮಗುಮಾವನ ಕಾಲು ಅಡಿಮೊಗಚ್ಚಿದ್ದು.
  • ಪಾತಿ ಅತ್ತೆಗೆ ಸೊಂಟ ಬೇನೆಯ ಮದ್ದು ಮುಗುದು ಈ ಮಳಗೆ ತಪ್ಪಲೂ ಆಯಿದಿಲ್ಲೆ.
  • ರಂಗಮಾವನ ಸೊಸೆಗೆ ತಿಂಬಲೂ ಆತು ಹೇಳಿ ಮಾಡಿದ್ದ ಚೆಕ್ಕರ್ಪೆ ಸಾಲಿನ ಗೊಬ್ಬರ ತೊಳದು ಹೋಗಿತ್ತು.
  • ಶಾಂಬಾವನ ಮಗ ವಿನುವಿನ ಬೀನುಬೇಗು ಹಾಳಪ್ಪದು ಬೇಡಾಳಿ ಅಟ್ಟಕ್ಕೆ ಹಾಕಿದ್ದವು.
  • ಹೀಂಗೆ ಮಳೆ ಬಂದ್ರೆ ಬುಡಕ್ಕೆ ಹಾಕಿದ ಗೊಬ್ರ ನಿಲ್ಲುಗ "ನಿನಿಗೆ"? ಹೇಳಿ ಪಂಜಚಿಕಯ್ಯಂಗ ತಲೆಬೆಶಿ.
  • ಮಗಳ ಯುನಿಪಾರ್ಮು ಚೆಂಡಿ ಒಣಗುತ್ತಿಲ್ಲೆ ಹೇಳಿ ಮಾಲಚಿಕ್ಕಮ್ಮಂಗೆ ತಲೆಬೇನೆ.
  • ದೀಪಕ್ಕನ ಮಲ್ಲಿಗೆ ಗೆಡುವಿಂಗೆ ಹುಳು ಬಿದ್ದಿದ್ದತ್ತು, ಬೂದಿ ಹಾಕಿರೆ ಗುಣ ಆಯಿದಿಲ್ಲೆಡ. ಪಿಸುರಿಲಿ ಪರಂಚುದರಲ್ಲಿ ಡಾಕ್ಟ್ರುಬಾವಂಗೆ ಕೂಪಲೆಡಿತ್ತಿಲ್ಲೆಡ, ಮಣಿಪುರಕ್ಕೆ ಹೆರಟು ನಿಂದಿದವು.
  • ದೀಪಕ್ಕನ ಮನೆಲಿ ಪೋನು ವಯರು ತುಂಡಾಗಿ ಎರಡು ದಿನ ರೂಪತ್ತೆ ಪೋನು ಬಯಿಂದಿಲ್ಲೆ.
  • ರೂಪತ್ತೆ ಮಗಳ ಮೊಬೈಲು ಪೋನಿನ ಟವರು ಬಿದ್ದಿದಡ! ಎರಡು ದಿನ ಮಾತಾಡದ್ದೆ ಅದರ ಮೈಮೇಲೇ ಬಿದ್ದ ಹಾಂಗೆ ಆಗಿತ್ತು.
  • ಕಾವೇರಿಕಾನಲ್ಲಿ ವೆನಿಲ್ಲ ಬಳ್ಳಿ ಒಣಗಿದ್ದದು ಚಿಗುರದ್ದೆ ಕೊಳದತ್ತು! ಚಿಗುರಿದ್ದರೆ ಬೈಕ್ಕು ತೆಗೇಕು ಹೇಳಿ ಗ್ರೇಶಿಗೊಂಡು ಇತ್ತಿದ್ದ, ನಮ್ಮ ಉದ್ದಮಾಣಿ.
  • ಮಾಷ್ಟ್ರು ಮಾವ ಎಲೆತಿಂಬಲೆ ಹಣ್ಣಡಕ್ಕೆ ಪೂರ ಮುಗುದ್ದು. ಜಾಲಕರೆಲಿ ಇದ್ದ ನೀರಡಕ್ಕೆ ತಪ್ಪಲೆಡಿಯದ್ದೆ ಅಟ್ಟಂದ ಕೊಟ್ಟಡಕ್ಕೆ ತಂದು ತಿಂಬಲೆ ಸುರು ಮಾಡಿದವು.
  • ಒರಿಶಾವಧಿ ಪೂಜಗೆ ವೆವಸ್ತೆ ಮಾಡಿಗೊಂಡಿಪ್ಪ ಮುಳಿಯಾಲದ ಅಪ್ಪಚ್ಚಿ ಮಳಗೆ ಹೆದರಿ ಮಾಪ್ಳೆಗೆ ಶೀಟು ಹಾಕಲೆ ಪೋನಿಲಿ ಹೇಳಿದವು, ಹೇಳಿಕ್ಕಿ ಪೋನು ಮಡುಗುವಗ ಮಳೆ ಬಿಟ್ಟಿದು.
  • ಗಣೇಶಮಾವ ಕೈಲಾಸ ಪರ್ವತಕ್ಕೆ ಹತ್ತಿ ಮಾನಸ ಸರೋವರ ತೀರ್ತ ತೈಂದವು, ಊರಿಲಿ ಹಂಚಿಗೊಂಡಿಪ್ಪಗ ಹರಿಮಾವ "ಇನ್ನು ತೊಂದರೆ ಇಲ್ಲೆ!" ಹೇಳಿದವಡ.
  • ರಂಗಮಾವನ ಇಸ್ಪೇಟು ಞಾಣಿದ್ದು ಪೆರುಮುಕದಪ್ಪಚ್ಚಿಗೆ ಬೀಪಿ ಜೋರಪ್ಪಲೆ ಕಾರಣ ಆತು. ಪಿಸುರಿಲಿ ಅಡಕ್ಕೆ ಹೋಳು ಮಾಡಿದ್ದರಲ್ಲಿ ಕೋರಿಕ್ಕಾರು ಮಾವನ ಕೊಂಬಿನ ಹಿಡಿ ತೋಟ್ರ ಪೀಶಕತ್ತಿ ಎರಡು ತುಂಡು!
  • ಆಚಮನೆಲಿ ಶಾಂತಾಣಿ ಮುಗುದ್ದಕ್ಕೆ ಮಾಂಬ್ಳದ ಕಟ್ಟ ಬಿಡುಸಿದ್ದವಡ, ಆಚಮನೆ ದೊಡ್ಡಣ್ಣ ಹೇಳಿದ್ದು.
  • ಗೆಡ್ಡದ ಜೋಯಿಶರಿಂಗೆ ಜೆನ ಬಾರದ್ದು ಮಾಟದ ಉಪದ್ರ ಹೇಳಿ ಗ್ರೇಶಿ ಬೇಜಾರು ಮಾಡಿಗೊಂಡಿದವು.
  • ನೀರ್ಕಜೆ ಅಪ್ಪಚ್ಚಿ ಚೆಂಬರ್ಪು ಅಣ್ಣನ ಮನೆಗೆ ನೆಡಕ್ಕೊಂಡು ಹೋಪಗ ಮುಳ್ಳಬೇಲಿ ಗೀರಿ ಈಗ ಚೂರಿಬೈಲು ಡಾಕ್ಟ್ರ ಮುಲಾಮು ಕಿಟ್ಟಿಗೊಂಡಿದ್ದು, ಕಿರಿಯಬ್ಬೆ.
  • ಕಾಂಚೋಡಿಯ ಮಾಣಿ ಬಿಡುಸಿದ ಚಿತ್ರಕ್ಕೆ ನೀರು ಬಿದ್ದು ಹೊಳೇಕಾದ ಉರುಟು ಸೂರ್ಯ ಈಗ ಬೆಳಿಆನೆ ಕುಂಞಿಯ ಹಾಂಗೆ ಕಾಣ್ತು.
  • ಯಕ್ಷಗಾನದ ಮರುಳಿಪ್ಪ ಸುಬ್ಬಣ್ಣನ ಮದ್ದಳೆ ಕರಣ ಎಳಕ್ಕಿ ಬಯಿಂದು.
  • ಚೆಂಬರ್ಪು ಮಾಷ್ಟ್ರಣ್ಣನ ನಾಗರ ಬೆತ್ತಕ್ಕೆ ಪುನಾ ಎಣ್ಣೆ ಕೊಟ್ಟವು, ಮಳಗೆ ಕುಂಬಪ್ಪದು ಬೇಡಾಳಿ.
  • ಅಡಿಗೆ ಉದಯಣ್ಣಂಗೆ ಪುರುಸೊತ್ತಿಪ್ಪ ಕಾರಣ ಕೊಟ್ಟು ಪಿಕ್ಕಾಸು ಹಿಡ್ಕೊಂಡು ಹಿತ್ಲಿಲಿ ಹೆರಟಿದವು, ಬಾಳೆ ಗೆಡು ನೆಡ್ಳೋ, ಮುಂಡಿ ಒಕ್ಕಲೋ ಗೊಂತಾಯಿದಿಲ್ಲೆ ಒಪ್ಪಣ್ಣಂಗೆ. :-(
  • ಮನೆಲಿ ಮಾಡಿದ ಬೇಳೆ ಹೋಳಿಗೆ ತಿಂದಷ್ಟೂ ಬೊಳುಂಬು ಮಾವಂಗೆ ಸಾಕಾಯಿದಿಲ್ಲೆ. ಅಕೆರಿಗೆ ಅತ್ತೆ ಬೈವಗ ತಿಂಬದು ನಿಲ್ಲುಸಿದ್ದಡ ಅವು. ಆಟಿ ಮಳಗೆ ಕೊದಿ ಜಾಸ್ತಿ ಅಡ, ಅಲ್ದೋ?
  • ’ಜಾಲಿಲಿಪ್ಪ ಅಡಕ್ಕೆ ಪೂರ ಬೆಳ್ಳಕ್ಕೆ’ ಹೇಳಿ ಕೊಳಚ್ಚಿಪ್ಪು ಬಾವಂಗೆ ಬೇಜಾರೇ ಬೇಜಾರು. ’ತೊಂದರಿಲ್ಲೆ, ಬಪ್ಪೊರಿಶ ಪುನಾ ಅಕ್ಕು’ ಹೇಳಿ ಸಮಾದಾನ ಮಾಡಿದನಡ ಆಚಕರೆ ಮಾಣಿ.
  • ಮಳೆ ಶುದ್ದಿ ಕೇಳಿದ ಅಮೆರಿಕಲ್ಲಿಪ್ಪ ಮಾಡಾವಕ್ಕ ನಾಳ್ದು ಜೆನವರಿಲಿ ಬಪ್ಪಗ ಬೇಕಕ್ಕು ಹೇಳಿ ಮೂರು ಕೆಂಪುಬಣ್ಣದ ಕೊಡೆ ತೆಗದು ಮಡಗಿದ್ದಡ, ಗ್ರೀಸು ಅರಿಯದ್ದ ನಮುನೆದು, ಬೇಗಿಲಿ ಹಿಡಿತ್ತಷ್ಟು ದೊಡ್ಡದು, ಮೂರು ಮಡಿಕ್ಕೆದು.
  • ಪಾಲಾರು ಬೀಜದ ಗುಡ್ಡೆ ಪೂರ ಚಿಗುರಿದ್ದು ಹೇಳಿ ಕುಮಾರ ಮಾವಂಗೆ ಕುಶಿಯೇ ಕುಶಿ.
  • ಕಲ್ಕತ್ತಕ್ಕೆ ಹೋಪ ಆಲೋಚನೆಲಿ ಕಳುದೊರಿಶದ ನಡುಕ್ಕೊಯ್ಲು ಅಡಕ್ಕೆಯ ಕೆಮ್ಕದ ಕಮ್ಮಿ ರೇಟಿಂಗೇ ಕೊಟ್ಟವು ನಮ್ಮ ಶರ್ಮ ಮಾವ. ಎಡಪ್ಪಾಡಿ ಬಾವನೊಟ್ಟಿಂಗೆ ಹೋಪಲೆ ಅರ್ಜೆಂಟಿಲಿ ಟಿಕೇಟಾಯೆಕ್ಕಲ್ದ, ಅದಕ್ಕೆ.
  • ಮೆಡ್ರಾಸಿಂಗೆ ಹೋಗಿ ಕೂದ ನೆಕ್ರಾಜೆ ಕೂಸಿಂಗೆ ಮಳೆ ಸೊರ್ಪಿದ್ದೇ ಗೊಂತಾಯಿದಿಲ್ಲೆಡ.
  • ಮಾಷ್ಟ್ರುಮಾವ ಆಟಿ ಕಳುತ್ತೋ ಹೇಳಿ ದಿನಾಗುಳೂ ಒಯಿಜಯಂತಿ ಪಂಚಾಂಗ ನೋಡ್ತವಡ. ಮಗಂಗೆ ಕೂಸುನೋಡ್ಳೆ ದಿನ ಮೂರ್ತಕ್ಕೆ!
  • ರಾಮಜ್ಜನ ಕೋಲೇಜಿಲಿ ಪಾಟ ಮಾಡ್ಳೆ ಬಂದ ಹೊಸ ಮಾಣಿ ಪಾಟ ಹೇಳುಸುಲೆ ಹೇಳಿ ಮಗುಮಾವನ ಮನೆಗೆ ಬಪ್ಪಗ ಜಾರಿ ಬಿದ್ದನಡ.
  • ಮಾಣಿಪ್ಪಾಡಿ ಮಮ್ಮದೆಯ ಮೂರ್ನೇ ಹೆಂಡತ್ತಿಯ ನಾಲ್ಕನೇ ಮಗ (ಕುಟ್ಟ) ಗಲ್ಪಿಂದ ಬಂತಡ.
  • ಶೈಲತ್ತಿಗೆಗೆ ಕ್ಲಾಸಿಂಗೆ ಬೇಕಾದ ಹೋಂ ವರ್ಕು ಮಾಡ್ಳೆ ಪುಟ್ಟತ್ತೆಗೆ ಅರಡಿಯದ್ದೆ ಶೈಲತ್ತಿಗೆ ಪೆಟ್ಟು ತಿಂದಿದಡ!
  • ಪಾರೆ ಅಜ್ಜಿಯ ಸ್ತಾನದ ಹತ್ತರಾಣ ಕೆರೆಲಿ ನೀರು ಮೊಗಚ್ಚಿ, ಮಾದು ಒಡದು ಮೋಹನ ಮನೆ ಬಂಟೆತ್ತಿಯ ಗುಲಾಬಿಸೆಸಿ ಕಂಗಾಲಾಯಿದಡ!
  • ಆಟಿ ತಿಂಗಳಿನ ಒರಿಶಾವದಿ ಹೊಡಾಡಿಕೆ ದಿನ ಕರೆಂಟಿಲ್ಲದ್ದೆ ಆರತಿ ಬೆಣಚ್ಚಿಲಿ ದೇವರೊಳ ರಂಗಮಾವನ ಅಪುರೂಪಕ್ಕೆ ಚೆಂದ ಕಂಡುಗೊಂಡಿತ್ತಡ, ತರವಾಡು ಮನೆಲಿ!!
  • ಇನ್ನೂ ಏನೇನೋ.....
ಅದಾ! ಆಟಿಲಿ ಎಂತ ಶುದ್ದಿ ಇಲ್ಲೆ ಶುದ್ದಿ ಇಲ್ಲೆ ಹೇಳಿ ಒಂದು ಸುತ್ತು ತಿರಗಿದವಂಗೆ ಇಷ್ಟೆಲ್ಲ ಸಿಕ್ಕಿತ್ತಿದಾ! ಇನ್ನೂ ಇಕ್ಕು, ನಿಂಗ ಬರೇರಿ, ಗೊಂತಿದ್ದರೆ.
ಎಂಗೊ, ಊರಿಲೇ ಇಪ್ಪವಕ್ಕೆ ಆಟಿ ಹೇಳಿರೆ ಪುರುಸೊತ್ತೇ ಅಲ್ದೋ? ಹಾಂಗೆ ಎಲ್ಲ ಬರದ್ದು. ;-)

ಎರಡು ದಿನ ಮಳೆ ಬಂದದರ್ಲಿ ಇಷ್ಟೆಲ್ಲ ಕತೆ ಆತು. ಈಗಾಣ ಜೆನಜೀವನ ಎರಡು ದಿನ ಮಳೆ ಬಂದದರ್ಲಿ ಪೂರ ತಟಪಟ ಆವುತ್ತು, ಅದಕ್ಕೆ ಬೇಕಾಗಿ ಎರಡೇ ದಿನಲ್ಲಿ ಮಳೆ ಬಿಡ್ತು. ಮದಲಿಂಗೆ ವಾರಗಟ್ಳೆ ಮಳೆ ಬಂದರೂ ಎಂತೂ ಆಯ್ಕೊಂಡು ಇತ್ತಿಲ್ಲೆ, ಅದಕ್ಕೇ ಅಂಬಗ ಒಂದರಿ ಹಿಡುದ ಮಳೆ ವಾರ ಆದರೂ ಬಿಟ್ಟೊಂಡಿತ್ತಿಲ್ಲೆ. ಜೀವಜಲ ಭೂಮಿಗೆ ಬೀಳುವಗ ಜೀವನ ವೆವಸ್ತೆಯೇ ಅಲ್ಲಾಡಿಬಿಡ್ತು, ಅಲ್ದೋ?

ಒಂದೊಪ್ಪ: ಆಟಿಲಿ ಎಂತದೂ ಶುದ್ದಿ ಇಲ್ಲದ್ರೆ ಅದೂ ಒಂದು ಶುದ್ದಿ, ಅಲ್ದೋ? ;-)